/* */ Let's THINK : By Dr.King, Swami Satyapriya: [Kannada] ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!

Friday, August 14, 2026

[Kannada] ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!

 
 
 

ಹಿಂದಿನ ಸಂಚಿಕೆಯಲ್ಲಿ, ಪ್ರಾಚೀನ ಭಾರತೀಯರು ಸುಖಭೋಗಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರಲಿಲ್ಲ ಎಂಬುದನ್ನು ನಾವು ಚರ್ಚಿಸಿದ್ದೆವು. ಅವರು ಹೇಳಿದ್ದು, ಸಂಯಮದಿಂದ ಸುಖವನ್ನು ಅನುಭವಿಸಬೇಕು ಎಂಬುದಷ್ಟೇ. ವ್ಯಕ್ತಿಗೆ ಹಾನಿ ಮಾಡುವುದರ ಜೊತೆಗೆ ಸಮಾಜಕ್ಕೂ ತೊಂದರೆಯಾಗಬಹುದಾದ ಸ್ವೇಚ್ಛಾಚಾರವನ್ನು ಮಾತ್ರ ಅವರು ನಿಷೇಧಿಸಿದ್ದರು.

ಹಾಗಾದರೆ, ಒಬ್ಬ ವ್ಯಕ್ತಿ ಒಂದಾದ ನಂತರ ಮತ್ತೊಂದು ಜನ್ಮವನ್ನು ಪಡೆಯುತ್ತಲೇ ಇರಬಹುದು ಅಲ್ಲವೇ? ಜಗತ್ತನ್ನು ಅನುಭವಿಸುತ್ತಾ, ಅದೂ ಒಂದು ಉತ್ತಮ ಶಿಸ್ತುಬದ್ಧ ರೀತಿಯಲ್ಲಿ, ಬದುಕುತ್ತಾ ಹೋಗಬಹುದು. ಹಾಗಿರುವಾಗ ಪರಮ ಸತ್ಯದ ಸಾಕ್ಷಾತ್ಕಾರ ಮತ್ತು ಮುಕ್ತಿಯ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು?

ಹೌದು, ಕನಿಷ್ಠ, ಸಿದ್ಧಾಂತದ ಮಟ್ಟಿಗೆ ಇದು ಸಾಧ್ಯವೇ. ಆದರೆ ನಿಜವಾಗಿಯೂ ಎಲ್ಲವೂ ಹಾಗೆಯೇ ನಡೆಯುತ್ತದೆಯೇ?
 
ಪುನರ್ಜನ್ಮ ಎನ್ನುವುದು ಪೂರ್ವದ ಬಹುತೇಕ ಧರ್ಮಗಳಲ್ಲಿರುವ ಬಲವಾದ ನಂಬಿಕೆಯಾಗಿದೆ. ಇಂದು ವಿಶ್ವದ ಪ್ರಮುಖ ಧರ್ಮಗಳಾದ ಕ್ರೈಸ್ತ ಧರ್ಮ ಮತ್ತು ಇಸ್ಲಾಂ, ಪುನರ್ಜನ್ಮವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಪ್ರಾಚೀನ ಜಗತ್ತಿನಲ್ಲಿ, ಬಹುತೇಕ ಎಲ್ಲ ಧರ್ಮಗಳೂ ಪುನರ್ಜನ್ಮವನ್ನು ವ್ಯಾಪಕವಾಗಿ ಒಪ್ಪಿಕೊಂಡಿದ್ದವು ಎನ್ನುವುದು ಬಹುಶಃ ನಿಜ.

ಪುನರ್ಜನ್ಮದ ಬಗ್ಗೆ ಮಾತನಾಡಲು ಸ್ವತಃ ಮೃತ್ಯುವಿನ ಅಧಿಪತಿಗಿಂತ ಹೆಚ್ಚಿನ ಅಧಿಕಾರ ಯಾರಿಗೆ ಇರಲು ಸಾಧ್ಯ? ಪ್ರಾಚೀನ ಭಾರತೀಯ ಗ್ರಂಥವೊಂದಾದ ಕಥಾ ಉಪನಿಷತ್ತಿನಲ್ಲಿ, ಮೃತ್ಯುವಿನ ಅಧಿಪತಿಯೇ ಈ ವಿಷಯದ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತಾನೆ.

ಇಂದಿನ ನನ್ನ ಉಪನ್ಯಾಸ, ಈ ಉಪನಿಷತ್ತನ್ನು ಆಧರಿಸಿದೆ.

ನೀವು ಸುಖಭೋಗದಲ್ಲಿ ತೊಡಗಿಕೊಂಡಾಗ, ಒಂದು ತಪ್ಪಿಸಿಕೊಳ್ಳಲಾಗದ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ ಎಂದು ಉಪನಿಷತ್ತು ಹೇಳುತ್ತದೆ . ಎಲ್ಲ ಸಮಯದಲ್ಲೂ ಅದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಸಾಧ್ಯವಾಗದೇ ಇರಬಹುದು. ನೀವು ನಿಯಂತ್ರಣವಿಲ್ಲದ ಸುಖಭೋಗದ ಸುಳಿಯಲ್ಲಿ ಸಿಲುಕಿ, ಸಂಪೂರ್ಣವಾಗಿ ದಾರಿ ತಪ್ಪಬಹುದು.

ಒಬ್ಬನು ದಾರಿ ತಪ್ಪಿದ್ದೇ ಆದರೆ ಏನಂತೆ? ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಜನ್ಮ ಇದ್ದೇ ಇರುತ್ತದಲ್ಲ!

ದುರದೃಷ್ಟವಶಾತ್, ವಿಷಯ ಅಷ್ಟು ಸರಳವಲ್ಲ.

ನೀವು ಮತ್ತೆ ಮನುಷ್ಯನಾಗಿಯೇ ಹುಟ್ಟುತ್ತೀರಿ ಎಂಬ ಯಾವುದೇ ಖಾತರಿ ಇಲ್ಲ. ಉದಾಹರಣೆಗೆ, ನೀವು ಒಂದು ಪ್ರಾಣಿಯಾಗಿ, ಕೀಟವಾಗಿ ಅಥವಾ ಸಸ್ಯವಾಗಿ ಪುನರ್ಜನ್ಮ ಪಡೆದರೆ, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಷ್ಟು ಬೌದ್ಧಿಕ ಪ್ರಬುದ್ಧತೆ ಆ ಜನ್ಮದಲ್ಲಿ ನಿಮಗೆ ಇರದೇ ಇರಬಹುದು. ಅಂತಹ ರೂಪಗಳಲ್ಲಿ ನೀವು ಕೇವಲ ಸಹಜ ಪ್ರವೃತ್ತಿಗಳಿಂದಲೇ ನಡೆಸಲ್ಪಡುತ್ತೀರಿ. ಆ ಪ್ರವೃತ್ತಿಗಳು ನಿಮ್ಮ ಬದುಕುಳಿಯುವಿಕೆಯನ್ನು ಮಾತ್ರ ಖಚಿತಪಡಿಸುತ್ತವೆ; ಆದರೆ ನಿಮ್ಮ ಮುಂದಿನ ವಿಕಾಸವನ್ನಲ್ಲ.

ಒಬ್ಬನು ಇನ್ನೂ ಉನ್ನತವಾದ ಜೀವಿಯಾಗಿ ಪುನರ್ಜನ್ಮ ಪಡೆಯಲು ಸಾಧ್ಯವಿಲ್ಲವೇ?

ಅದೂ ಸಾಧ್ಯವೇ. ನಿಮ್ಮ ಸಂಚಿತ ಕರ್ಮವನ್ನು ಅವಲಂಬಿಸಿ, ನೀವು ಪಿತೃಲೋಕದ ಜೀವಿಯಾಗಿ, ಸ್ವರ್ಗಲೋಕದ ದೇವತೆಯಾಗಿ ಅಥವಾ ಸಂಪೂರ್ಣವಾಗಿ ವಿಕಸಿತನಾದ ಬ್ರಹ್ಮಲೋಕದ ಜೀವಿಯಾಗಿಯೂ ಪುನರ್ಜನ್ಮ ಪಡೆಯಬಹುದು.

ಆದರೆ ಉಪನಿಷತ್ತು ಇಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹೇಳುತ್ತದೆ. ಅದು ಹೀಗೆ ಹೇಳುತ್ತದೆ:

- ನೀವು ಪಿತೃಲೋಕದಲ್ಲಿ ಹುಟ್ಟಿದರೆ, ನಿಮಗೆ ಪರಮ ಸತ್ಯದ ಒಂದು ಅಸ್ಪಷ್ಟ ನೋಟ ಮಾತ್ರ ದೊರೆಯುತ್ತದೆ. ಅದು > ಕನಸಿನಲ್ಲಿ ಏನನ್ನ್ನೋ ನೋಡುವಂತಿರುತ್ತದೆ. ಇದಕ್ಕೆ ಕಾರಣ, ಈ ಮೃತ ಜೀವಿಗಳಿಗೆ ತಮ್ಮ ಹಿಂದಿನ ಜೀವನದ > ಮೇಲೆ ಅಷ್ಟು ಗಾಢವಾದ ಅನುಬಂಧವಿರುತ್ತದೆ, ಅವರು ತಮ್ಮನ್ನು ಸಂಪೂರ್ಣವಾಗಿ ಮುಕ್ತಗೊಳಿಸಿಕೊಳ್ಳಲು > ಸಾಧ್ಯವಾಗುವುದಿಲ್ಲ.

- ನೀವು ಒಬ್ಬ ದೇವತೆಯಾಗಿ ಹುಟ್ಟಿದರೂ ಸಹ, ಪರಮ ಸತ್ಯದ ದರ್ಶನವು ನೀರಿನಲ್ಲಿ ನಿಮ್ಮ ಪ್ರತಿಬಿಂಬವನ್ನು > ನೋಡುವಂತಿರುತ್ತದೆ. ನಿಮಗೆ ಅದರ ಒಂದು ನೋಟವೇನೋ ಸಿಗುತ್ತದೆ. ಆದರೆ ನೀರಿನ ಕಶ್ಮಲದಿಂದಲೂ, > ನೀರಿನಲ್ಲಿ ಉಂಟಾಗಬಹುದಾದ ತರಂಗಗಳಿಂದಲೂ ಆ ಪ್ರತಿಬಿಂಬದಲ್ಲಿ ಸ್ಪಷ್ಟತೆ ಇರುವುದಿಲ್ಲ. ಇದಕ್ಕೆ ಕಾರಣ, > ದೇವತೆಗಳು ಸಾಮಾನ್ಯವಾಗಿ ಇಂದ್ರಿಯಸುಖಗಳ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ ಮತ್ತು > ಸ್ವಯಂನಿಯಂತ್ರಣದ ಕೊರತೆಯನ್ನು ಹೊಂದಿರುತ್ತಾರೆ.

- ಅದೃಷ್ಟವಶಾತ್ ನೀವು ಬ್ರಹ್ಮಲೋಕದಲ್ಲಿ ಸಂಪೂರ್ಣವಾಗಿ ವಿಕಸಿತನಾದ ಜೀವಿಯಾಗಿ ಹುಟ್ಟಿದ್ದೇ ಆದರೆ, > ಖಂಡಿತವಾಗಿಯೂ ಪರಮ ಸತ್ಯದ ಅತ್ಯಂತ ಸ್ಪಷ್ಟವಾದ ದರ್ಶನವನ್ನು ಪಡೆಯಬಹುದು; ಬೆಳಕು ಮತ್ತು ನೆರಳನ್ನು > ನೋಡುವಷ್ಟು ಸ್ಪಷ್ಟವಾಗಿ. ಆದರೆ ಒಮ್ಮಿಂದೊಮ್ಮೆಗೇ ಎಷ್ಟು ಜನರು ಆ ಮಟ್ಟವನ್ನು ತಲುಪಲು ಸಾಧ್ಯ?

- ಮನುಷ್ಯನಾಗಿ ಅಸ್ತಿತ್ವದಲ್ಲಿರುವಾಗ ಮಾತ್ರ ನೀವು ಪರಮ ಸತ್ಯವನ್ನು ನಿಮ್ಮ ಬುದ್ಧಿಯಲ್ಲಿಯೇ > ಪ್ರತಿಬಿಂಬಿತವಾಗಿರುವುದನ್ನು ನೋಡಬಹುದು. ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡುತ್ತಿರುವಂತೆ.

ಯಥಾ ಆದರ್ಶೇ ತಥಾ ಆತ್ಮನಿ,

ಯಥಾ ಸ್ವಪ್ನೇ ತಥಾ ಪಿತೃಲೋಕೇ,

ಯಥಾ ಅಪ್ಸು ಪರಿ ಇವ ದದೃಶೇ ತಥಾ ಗಂಧರ್ವಲೋಕೇ,

ಛಾಯಾ ಆತಪಯೋಃ ಇವ ಬ್ರಹ್ಮಲೋಕೇ।


— ಕಥಾ ಉಪನಿಷತ್ 2.3.5.

ಈ ಜೀವನದಲ್ಲಿಯೇ ನೀವು ಅದನ್ನು ಸಾಧಿಸಬಹುದು!

ನೀವು ಸತ್ತ ನಂತರ ಉತ್ತಮವಾದ ಜೀವನವನ್ನು ಪಡೆಯುತ್ತೀರಿ ಎಂದು ಅನೇಕ ಧರ್ಮಗಳು ಭರವಸೆ ನೀಡುತ್ತವೆ. ಆದರೆ ಈ ಉಪನಿಷತ್ತು ಹೇಳುವುದು, ಪರಮ ಸತ್ಯವನ್ನು ಈ ಜೀವನದಲ್ಲಿಯೇ ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯ ಎಂದು!

ಕುತೂಹಲಕರವಾದ ಸಂಗತಿಯೆಂದರೆ, ಪಿತೃಗಳಿಗಾಗಲಿ, ದೇವತೆಗಳಿಗಾಗಲಿ ಸಾಧ್ಯವಾಗದಂತಹ ಕೆಲಸವನ್ನು ನೀವು, ಮತ್ತು ನೀವು ಮಾತ್ರ, ಮನುಷ್ಯನಾಗಿ ಹುಟ್ಟಿರುವಾಗ ಮಾಡಬಹುದು, ಎಂದು ಉಪನಿಷತ್ತು ಹೇಳುತ್ತದೆ. ಆದ್ದರಿಂದ ಈ ಮಹಾನ್ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ನಿಮಗೆ ಸಲಹೆ ನೀಡುತ್ತದೆ.

ಪರಮ ಸತ್ಯವು ನಿಮ್ಮ ಬುದ್ಧಿಯಲ್ಲಿಯೇ ಪ್ರತಿಬಿಂಬಿಸಬಹುದು; ನೀವು ಅದನ್ನು ಕನ್ನಡಿಯಲ್ಲಿ ನೋಡುತ್ತಿರುವಂತೆ ಕಾಣಬಹುದು ಎಂದು ಹೇಳುತ್ತದೆ.

ಅದು ಸಂಭವಿಸಿದಾಗ, ನೀವು ಯಾವುದೋ ಒಂದು ಹೊಸತಾಗಿ ಮಾರ್ಪಡುವುದಿಲ್ಲ. ಬದಲಾಗಿ, ನೀವು ವಾಸ್ತವವನ್ನು ಮುಚ್ಚಿರುವ ಸುಳ್ಳು-ಪರದೆಯನ್ನು ಮಾತ್ರ ಸರಿಸುತ್ತೀರಿ. ಆ ಪರದೆ ಸರಿದ ನಂತರ, ವಾಸ್ತವವು ತಾನಾಗಿಯೇ ಪ್ರಕಟವಾಗುತ್ತದೆ.

ನೀವು ಕನ್ನಡಿಯ ಮುಂದೆ ನಿಂತಾಗ, ನೀವು ನಿಜವಾಗಿ ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ನೀವು ನೋಡುತ್ತೀರಿ. ನಿಮ್ಮನ್ನು ನೀವು ನೋಡುವುದಕ್ಕೆ ಅದಕ್ಕಿಂತ ಸುಲಭವಾದ ಮಾರ್ಗ ಮತ್ತೊಂದಿಲ್ಲ. ನೀವು ನೋಡುವುದು ನಿಜವಾಗಿಯೂ ನೀವೇ ಅಲ್ಲದಿರಬಹುದು; ಆದರೆ ಅದಕ್ಕೆ ಅತ್ಯಂತ ಸಮೀಪದ ಪ್ರತಿಬಿಂಬ.

ಆದರೆ, ನೀವು ಒಂದು ವಿಷಯವನ್ನು ಗಮನಿಸಿದ್ದೀರಾ?

ಕನ್ನಡಿಯಲ್ಲಿ ನಿಮ್ಮದೇ ಪ್ರತಿಬಿಂಬವನ್ನು ನೋಡಬೇಕಾದರೆ, ಆ ಕನ್ನಡಿ ಯಾವುದೇ ಕಲೆ ಅಥವಾ ಕೊಳಕು ಇಲ್ಲದೆ ನಿರ್ಮಲವಾಗಿರಬೇಕು. ಕೊಳಕಾದ ಕನ್ನಡಿಯು ನಿಮ್ಮ ವಿಕೃತ ಪ್ರತಿಬಿಂಬವನ್ನಷ್ಟೇ ತೋರಿಸಬಲ್ಲದು.

ಹಾಗಾಗಿ, ನಿಮ್ಮ ಮೊದಲ ಹೆಜ್ಜೆ, ಕನ್ನಡಿಯನ್ನು ಸ್ವಚ್ಛಗೊಳಿಸುವುದು. ಮತ್ತು ಅದನ್ನು ಸದಾ ಸ್ವಚ್ಛವಾಗಿಯೇ ಇಟ್ಟುಕೊಳ್ಳುವುದನ್ನು ನೀವು ಮುಂದುವರಿಸಬೇಕು. ಅದುವೇ ಯೋಗ ಅಥವಾ ಧ್ಯಾನದ ಪ್ರಕ್ರಿಯೆ.

ಮನುಷ್ಯನಾಗಿ ಹುಟ್ಟಿರುವ ನಿಮಗೆ ಈಗ ಒಂದು ಮಹಾನ್ ಅವಕಾಶ ದೊರೆತಿದೆ. ಅದನ್ನು ಕಳೆದುಕೊಳ್ಳಬೇಡಿ. ಆತ್ಮ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿ. ಒಬ್ಬ ಪ್ರಖ್ಯಾತ ಸಂತ, ಪುರಂದರ ದಾಸರು ಹೇಳಿರುವಂತೆ "ಮಾನವ ಜನ್ಮ ಬಲು ದೊಡ್ಡದು. ಅದನ್ನು ಹಾನಿ ಮಾಡಲು ಬೇಡಿ, ಹುಚ್ಚಪ್ಪರುಗಳಿರಾ!"

ಏನಂತೀರಿ ಈ ವಿಷಯದ ಬಗ್ಗೆ? ನಿಮ್ಮ ಅನಿಸಿಕೆಯನ್ನು ಖಂಡಿತ ಬರೆದು ತಿಳಿಸಿ. ಮತ್ತೆ ಭೇಟಿಯಾಗೋಣ.
 
 --------------------------------------------------------------------

ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ
 
© Dr. King, Swami Satyapriya 2026

No comments:

Post a Comment